Sunday, July 16, 2006

Talk time ಬದಲು ಬರೀ time ಸಿಕ್ಕಿದ್ದಿದ್ದರೆ....

ಪ್ರಿಯ ಶಿವ್,
ಹೇಗಿದ್ದೀರಾ? ನೀವಿರುವ ಪ್ರಪಂಚದ ಆ ಭಾಗದಲ್ಲಿ ಹೆಗಿದೆ ಜೀವನ?

ಇಲ್ಲಿ ಬಹಳ ದಿನಗಳಿಂದ ಸುರಿಯುತಿದ್ದ ಮಳೆ ಒಂದು ವಾರದಿಂದ ನಿಂತಿದೆ. ಹೇಮಾವತಿ ಡ್ಯಾಮ್ನಲ್ಲಿ ಗರಿಷ್ಟ ಮಟ್ಟಕ್ಕೆ ನೀರು ಬಂದಿದೆ. ಮುಂಗಾರಿನಲ್ಲೇ ಜಲಾಶಯ ತುಂಬಿರುವುದು ಇದು ಎರಡನೆ ಬಾರಿಯಂತೆ. ಹನ್ನೆರಡು ವರ್ಷಗಳ ನಂತರ ಕಳೆದ ವರ್ಷ ಮೊದಲಬಾರಿಗೆ ಜಲಾಶಯದ ಎಲ್ಲಾ ಒಂಬತ್ತು ಬಾಗಿಲುಗಳ ಮೂಲಕ ನಿರನ್ನು ಹೊರಬಿಡಲಾಗಿತ್ತು. ಆಗ ನೀರಿನ ಆ ಭೋರ್ಗರೆತ ರುದ್ರರಮಣೀಯವಾಗಿತ್ತು. ಇಲ್ಲಿಯ ಸುತ್ತಮುತ್ತಿನ ಜನರ ಕಣ್ಣಿಗೆ ಅದೊಂದು ಹಬ್ಬ. ಈ ಬಾರಿಯು ಎಲ್ಲಾ ಬಾಗಿಲುಗಳ ಮೂಲಕ ನೀರು ಹರಿಬಿಡುವ ಸಂಭವ ಇದೆ. ಒಂದು ವಾರದಿಂದ ಮಳೆ ನಿಂತಿರುವುದರಿಂದ ಇದು ಇನ್ನೊಂದು ವಾರ ತಡವಾಗಬಹುದು.

ಇಲ್ಲಿ ಪ್ರಮುಖ ರಸ್ತೆಗಳನ್ನೆಲ್ಲಾ ವಿಶಾಲ ಮಾಡುವ ಸಲುವಾಗಿ ಅಗೆದು ಅವಾಂತರ ಮಾಡಿಟ್ಟಿದ್ದಾರೆ. ಮಹಾಮಸ್ತಭಿಷೆಕಕ್ಕಿಂತ ಮುಂಚೆಯೇ ಪ್ರಾರಂಭಿಸಿ ಮಸ್ತಾಭಿಷೇಕ ಮುಗಿಯುವುದೊರಳಗೆ ಈ ಕಾರ್ಯ ಮುಗಿಯಬೇಕಿತ್ತು. ಆದರೆ ಕೆಲಸ ಸಾಗುತ್ತಿರುವ ವೇಗ ನೋಡಿದರೆ ಎಲ್ಲಾ ಮುಗಿಯಲು ಇನ್ನೊಂದು ಮಹಮಸ್ತಾಭಿಷೇಕ ಬರಬೇಕು! ಎಲ್ಲಾ ರಸ್ತೆಗಳು ಕೆಸರಿನ ಗದ್ದೆ ಆಗಿವೆ.

ರಸ್ತೆ ಬದಿಯಲ್ಲಿ ಎಳೆನೀರು ಮಾರುವವನ ಮುಖದಲ್ಲಿ ಹೊಟ್ಟೆಪಾಡಿನ ಚಿಂತೆ ಎದ್ದು ಕಾಣುತ್ತಿದೆ. ಶೀತ ವಾತವರಣ ಇರುವುದರಿಂದ ಎಳೆನೀರು ಮಾರಾಟವಾಗುತ್ತಿಲ್ಲ. ಬಿಸಿಲಿದ್ದರೆ ಒಂದಿಷ್ಟು ವ್ಯಾಪಾರ ಆಗುತ್ತೆ. ಮಾವಿನಹಣ್ಣು ಮಾರುತ್ತಿದ್ದಾಕೆ ಈಗ ಶೇಂಗಾ ವ್ಯಾಪಾರಕ್ಕಿಳಿದಿದ್ದಾಳೆ. ಮಾವಿನಹಣ್ಣು ಅಷ್ಟಾಗಿ ಕಾಣಸಿಗುತ್ತಿಲ್ಲ. ಏನೇ ಮಳೆ ಬಂದರೂ ದಿನಪತ್ರಿಕೆ ಎಂದಿನಂತೆಯೇ ಮನೆಗೆ ತಲುಪುತ್ತಿದೆ.

ಬಹಳ ದಿನಗಳಾದವು ಓಲೆಗರಿಯಲ್ಲಿ ಬರೆದು. ಸಮಯದ ಅಭಾವ, ಸೊಮಾರಿತನ. terrible time mismanagement ಇವೆಲ್ಲದರ ಕೊಡುಗೆ ಇದು. ವಾರಕ್ಕೊಂದು ಪತ್ರ ಪ್ರಕಟಿಸುವ ಉದ್ದೇಶದಿಂದ ಪ್ರಾರಂಭಿಸಿದ ಓಲೆಗರಿ ಇದುವರೆಗೂ ಕಂಡಿರುವುದು ಕೇವಲ ಮೂರು ಪತ್ರ. ಇದು ನಾಲ್ಕನೆಯದು.

ಸುಮಾರು ಐದು ವರ್ಷಗಳ ಹಿಂದೆ, ಬೇರೆ ಬೇರೆ ಊರುಗಳಲ್ಲಿರುವ ನನ್ನ ಮಿತ್ರರಿಗೆ ವಾರಕ್ಕೆ ಇಬ್ಬಿಬ್ಬರಿಗಾದರು ಪತ್ರ ಬರೆಯುತ್ತಿದ್ದೆ. ಅವರೂ ಸಹ ಆಗಾಗ ಪತ್ರ ಬರೆಯುತ್ತಿದ್ದರು. ಈಗ ನಾನು ಅವರಿಗೆ ಪತ್ರ ಬರೆದು ಮೂರು ವರ್ಷಗಳಾಗಿವೆ! ಅವರೂ ಸಹ ಬರೆದಿಲ್ಲ. ಅಪರೂಪಕ್ಕೊಮ್ಮೆ ಈ-ಮೇಲ್ ವಿನಿಮಯ ನಡೆಯುತ್ತೆ, ಒಂದೆರಡು 'ಹಲೋ' ಕೇಳಿಸುತ್ತೆ. ಹಾಗಂತ ನಮ್ಮ ನಡುವಿನ ಮಿತ್ರತ್ವ dilute ಆಗಿಲ್ಲ. ನಮ್ಮ ಬದುಕು ಯಾಂತ್ರಿಕ ಆಗಿಬಿಟ್ಟಿದೆ ಅಷ್ಟೆ!

ಯಾರಿಗೆ ವಿಚಾರಿಸಿದರು ಸಮಯದ ಅಭಾವ. ಯಾರಬಳಿಯೂ time ಇಲ್ಲ. ಎಲ್ಲರೂ ಬ್ಯುಸಿ! Talk time ಬದಲು ಬರೀ time ಸಿಕ್ಕಿದ್ದಿದ್ದರೆ ಎಷ್ಟು ಚೆನ್ನಾಗಿರುತಿತ್ತು!

ಬೆಂಗಳೂರಿನಂತಹ ನಗರಗಳಲ್ಲಿ ಜನ ನಡೆಯುವುದಿಲ್ಲ ಓಡುತ್ತಿರುತ್ತಾರೆ. ವಾಹನಗಳು ತಮ್ಮನ್ನು ಸುನಾಮಿ ಅಲೆಯೊಂದು ಅಟ್ಟಿಸಿಕೊಂಡು ಬರುತ್ತಿದೆ ಎಂಬಂತೆ 'ಹಾರುತ್ತಿರುತ್ತವೆ'. ಯಾರಿಗೂ ಪುರುಸೊತ್ತಿಲ್ಲ! ಪಾಪ, ಕೆಲವರಿಗಂತು ಬದುಕಲೂ ಪುರುಸೊತ್ತಿಲ್ಲ! ಜವರಾಯ ಬಂದು ಎಳುದುಕೊಂಡು ಹೋಗುತ್ತಿದ್ದಾನೆ ಅವರನ್ನು. ಇಂತಹವರಲ್ಲಿ ಶೇಕಡ 90 ರಷ್ಟು heart attack ಕೇಸ್ ಗಳೇ. ಅವರ ವಯಸ್ಸಾದರು ಎಷ್ಟಿರುತ್ತದೆ? 22, 25 ಹೆಚ್ಚೆಂದರೆ 30-35. ಮುಂಚೆ 45 ವರ್ಷದ ನಂತರವೆ ಹಾರ್ಟು attackಗೆ ಒಳಗಾಗುತ್ತಿದ್ದದ್ದು. ಈಗ? age no bar!

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ಒಂದುವಾರದಷ್ಟು ಸಮಯ ತೆಗೆದುಕೊಳ್ಳುತ್ತಿದ್ದ ಕೆಲಸ ಈಗ ತಂತ್ರಜ್ಞಾನದಿಂದಾಗಿ ಒಂದು ಗಂಟೆಯೊಳಗೇ ಮುಗಿಯುತ್ತದೆ. ಆದರೆ ಈಗ ನೋಡಿದರೆ ನಮಗಿರುವ ಕೆಲಸದ ರಾಶಿಯನ್ನು ಮುಗಿಸಲು ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸಾಕಾಗುತ್ತಿಲ್ಲ. ತಂತ್ರಜ್ಞಾನದಿಂದಾಗಿ ಉಳಿತಾಯ ಆಗಿರುವ ಸಮಯ ಎಲ್ಲಿ ಮಾಯ ಆಗುತ್ತಿದೆ? ನಾವು ನಮ್ಮ ಮೂಲ ಅವಶ್ಯಕತೆಗಳಿಗೆ(basic needs) ತಕ್ಕಂತೆ ಸಾಧನಗಳನ್ನು ರೂಪಿಸುವ ಬದಲು ಸಾಧನಗಳಿಗೆ ತಕ್ಕಂತೆ ನಮ್ಮ basic needs ಗಳನ್ನು ಹೆಚ್ಚಿಸಿಕೊಂಡಿದ್ದೇವೆ. ಅದೇ ಇಂದಿನ ದುಃಸ್ಥಿತಿಗೆ ಮೂಲ ಕಾರಣ.

ಚಕ್ರವ್ಯೂಹ ರಚಿಸಿಕೊಂಡ ನಾವೇ ಅದರೊಳಗೆ ಸಿಲುಕಿಕೊಂಡಿದ್ದೇವೆ, ಹೊರಬರಲಾಗದಷ್ಟು!

ಏನಂತೀರಿ ಶಿವ್?

ಇಂತಿ ನಿಮ್ಮ

ಈ-ಗೆಳೆಯ

Sunday, June 11, 2006

ಅದೆಲ್ಲಾ ಹೇಳಿದರೆ ನಿಮಗೆ ಹೊಟ್ಟೆಕಿಚ್ಚಾಗುತ್ತದೆ!!!!

ಮೈ ಡಿಯರ್ ಮಕ್ಕಳೆ,
ಹೇಗಿದ್ದೀರಾ? ಶಾಲೆ ಪ್ರಾರಂಭ ಆಗಿ ಒಂದು ವಾರದ ಮೇಲಾಯಿತು ಅಲ್ವಾ?
ಹೇಗನ್ನಿಸುತ್ತಿದೆ;ರಜೆ ಮುಗಿಸಿ ಶಾಲೆಗೆ ಹೋಗುವಾಗ?
ಹೊಸ ಯೂನಿಫಾರಮ್,ಹೊಸ-ಹೊಸ ಪುಸ್ತಕ,ಹೊಸ ಕ್ಲಾಸ್ ಟೀಚರ್........ಚೆನ್ನಾಗಿರಬೇಕಲ್ಲಾ?

ನಾವು ನಿಮ್ಮಷ್ಟರಿದ್ದಾಗ ಇದೇನು ಇರಲಿಲ್ಲ! ಯೂನಿಫಾರಮ್ ನಾವು ಹಾಕಿಕೊಂಡದ್ದು ಎಂಟನೆ ಕ್ಲಾಸಿಗೆ ಬಂದಾಗ! ನಾಲ್ಕನೇ ಕ್ಲಾಸಿನವರಗೆ ನಮಗೆ ನೋಟ್ ಬುಕ್ಕೇ ಇರಲಿಲ್ಲ. ಎಲ್ಲಾ ಸ್ಲೇಟ್ ನಲ್ಲೇ ಮುಗಿಯುತಿತ್ತು. ಇದ್ದರೆ ಒಂದೇ ಒಂದು ನೋಟ್ ಬುಕ್ ಇರುತಿತ್ತು. ಆದರೆ ಅದನ್ನು ಪೆನ್ನಿನಲ್ಲಿ ಬರೆಯುತ್ತಿರಲಿಲ್ಲ, ಪೆನ್ಸಿಲಿನಲ್ಲಿ. ಅಂದಹಾಗೆ ಸ್ಲೇಟು ಅಂದರೆ ಏನು ಗೊತ್ತಾ? ಬಳಪ ಎಂದಾದರು ಮುಟ್ಟಿದ್ದೀರಾ? ಛೇ! ನಿಮ್ಮಲ್ಲಿ ಬಹಳ ಮಕ್ಕಳು ಇವುಗಳನ್ನು ನೋಡಿಯೇ ಇಲ್ಲವೇನೊ?

ನೀವೆಲ್ಲಾ ಎಷ್ಟೆಷ್ಟು ಪುಸ್ತಕಗಳನ್ನು ಹೊತ್ತಿಕೊಂಡು ಹೋಗುತ್ತೀರಾ,ಅಬ್ಬಬ್ಬಾ ! ನಾವಾ? ಅಯ್ಯೋ, ನಮಗೆ ಇದ್ದದ್ದು ಒಂದೆರಡು ಪಾಠದ ಪುಸ್ತಕ(ನೀವು ಅದನ್ನು text book ಅನ್ನುತ್ತೀರಿ) ಜೊತೆಗೆ ಸ್ಲೇಟು ಬಳಪ. ಇನ್ನೊಂದು ವಿಷಯ ಗೊತ್ತಾ? ನಮಗೆ ಹೋಮ್ ವರ್ಕ್ ಇರಲೇ ಇಲ್ಲ. ಶಾಲೆಯಲ್ಲಿ ಬರೆದಿದ್ದು ಅಲ್ಲೆ ಅಳಿಸಿ ಬರುತ್ತಿದ್ದೆವು. ಮನೆಗೆ ಬಂದಾಗ ಆಟ ಊಟ ಅಷ್ಟೆ!

ನಿಮ್ಮ ವಯಸ್ಸಿನಲ್ಲಿ ನಮಗೆ 'ಕಂಪ್ಯೂಟರ್' ಪದದ ಪರಿಚಯವೇ ಇರಲಿಲ್ಲ. ನಮ್ಮ ಟೀಚರ್ ಗಳಿಗೂ ಅದರ ಪರಿಚಯ ಇರಲಿಲ್ಲ ಅನ್ನಿಸುತ್ತೆ. ನಾವು ಕಂಪ್ಯೂಟರ್ ನೋಡಿದ್ದು ಈಗಲೇ. ಆದರೆ ನೀವೆಲ್ಲ ಕಂಪ್ಯೂಟರ್ ಯುಗದ ಮಕ್ಕಳು. ನಿಮಗೆ ಏನೆಲ್ಲಾ ಸೌಲಭ್ಯ ಇದೆ! ಆಡಲು ಕಂಪ್ಯೂಟರ್ ಗೇಮ್ಸ್,ವೀಡಿಯೋ ಗೇಮ್ಸ್, ನೋಡಲು ಕಾರ್ಟೂನ್ ಶೊ, ಪೋಗೊ,wwf, ತಿನ್ನಲು ಕೆಲಾಗ್ಸ್, ಮ್ಯಾಗಿ ನೂಡಲ್ಸ್, ಡೈರಿ ಮಿಲ್ಕ್........ಅಬ್ಬಬ್ಬಾ, ಏನೆಲ್ಲಾ ಇದೆ 'ನಿಮಗೋಸ್ಕರ'? ಆದರೆ ಪ್ರಾಮಾಣಿಕವಾಗಿ ಹೇಳಲಾ? ಇಷ್ಟೆಲ್ಲಾ ಇದ್ದರು ನೀವು ದುರಾದೃಷ್ಟವಂತರು! ನಾವೆ ನಿಜವಾದ ಅದೃಷ್ಟವಂತರು. ನಿಮಗೆ ಇದು ಅರ್ಥ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ತಂದೆ-ತಾಯಿಗೆ ಅರ್ಥ ಆಗುತ್ತೆ, ಕೇಳಿ ನೋಡಿ.

ಮೊನ್ನೆ ರಜೆಯಲ್ಲಿ ನೀವು ಅಜ್ಜಿ ಊರಿಗೆ ಹೋಗಿದ್ರಾ? ಹೋಗಿ ಅಲ್ಲಿ ಏನ್ ಮಾಡಿದ್ರಿ? ಅಜ್ಜಿ ಯಾವ ಕತೆ ಹೇಳಿದರು ನಿಮಗೆ? ಅಲ್ಲಿ ಕೆರೆ ಹತ್ತಿರ ಹೋಗಿದ್ರಾ? ಅಜ್ಜನ ಜತೆ ಮಾವಿನ ತೋಪಿಗೆ ಹೋಗಿ ಮಾವಿನ ಹಣ್ಣು ತಿಂದು ಬಂದಿರಾ? ಅಲ್ಲಿ ಮರಕ್ಕೆ ಜೋಕಾಲಿ ಕಟ್ಟಿ ಜೀಕಿದ್ರಾ? ಇದ್ಯಾವುದು ಮಾಡಿಲ್ಲ ಅಲ್ವಾ? ನೀವೆಲ್ಲ ಏನೇನು ಮಾಡಿದ್ರಿ ಗೊತ್ತು. ಒಂದಿಷ್ಟು ಪೊಗೊ ನೋಡಿದ್ರಿ, wwf 'enjoy' ಮಾಡಿದ್ರಿ, fanatcy parkಗೆ ಹೋಗಿರಬಹುದು, harry potter ಚಿತ್ರ ನೋಡಿರಬಹುದು. ಅಷ್ಟೆ ಅಲ್ವಾ? ನಿಮ್ಮ ವಯಸ್ಸಿನಲ್ಲಿ ನಾವು ಇಂತಹ ರಜೆಯಲ್ಲಿ ಎಷ್ಟು ಮಜಾ ಮಾಡುತ್ತಿದ್ದೆವು! ರಜೆ ಬಂದರೆ ಸಾಕು, ಅಜ್ಜಿ ಊರಿಗೆ ರವಾನೆ. ಅಲ್ಲಿ ಅಜ್ಜಿಯಿಂದ ದಿನಕ್ಕೊಂದು ಕತೆ. ಬೆಳಿಗ್ಗೆ ಹೊತ್ತು ಅಜ್ಜನ ಜೊತೆ ತೋಟದಲ್ಲಿ ಸುತ್ತಾಟ. ಕೆರೆಗೂ ಹೋಗುತಿತ್ತು ನಮ್ಮ ಸವಾರಿ. ನೀವು ಎಂದಾದರು ಮಾವಿನ ಕಾಯಿ ತಿಂದಿದ್ದೀರಾ, ಉಪ್ಪು ಖಾರದ ಪುಡಿಯೊಂದಿಗೆ? ಅದರ ಮಜವೇ ಬೇರೆ. ಅಜ್ಜಿ ರುಚಿ ರುಚಿಯಾದ ತಿಂಡಿ ಮಾಡಿಕೊಡುತ್ತಿದ್ದರು. ದಿನಗಳು ಹೋಗುತ್ತಿದ್ದದ್ದು ಗೊತ್ತೇ ಆಗುತ್ತಿರಲಿಲ್ಲ. ರಜೆ ಮುಗಿದು ಶಾಲೆಗೆ ಹೋಗಬೇಕೆಂದರೇ ಬೇಜಾರಾಗುತಿತ್ತು.

ಪ್ರತಿದಿನ ಶಾಲೆ ಮುಗಿಸಿ ಮನೆಗೆ ಬಂದಾಗ ನಿಮ್ಮ ಹಾಗೆ ನಮಗೆ ನೋಡಲು ಪೊಗೊ ಆಗಲಿ,wwf ಆಗಲಿ ಇರಲಿಲ್ಲ. ಅಸಲಿಗೆ ಟಿ ವಿ ಡಬ್ಬಗಳೇ ಇರಲಿಲ್ಲ! ನಾವು ಆಡುತ್ತಿದ್ದ ಆಟಗಳೇ ಬೇರೆ ಅವುಗಳ ಮಜವೇ ಬೇರೆ. ಬುಗುರಿ ಆಟ, ಗೋಲಿ ಆಟ, ಚಿಣ್ಣಿ ದಾಂಡು. ಎಂತೆಂಥಾ ವೆರೈಟಿ ಇತ್ತು ನಮ್ಮ ಆಟಗಳಲ್ಲಿ! ನೀವು ಬುಗುರಿ ಆಡಿದ್ದೀರಾ? ಗೋಲಿ ನೋಡಿದ್ದೀರಾ? ಹೋಗಲಿ, ಚಿನ್ನಿ ದಾಂಡು ಏನು ಗೊತ್ತಾ? ಬಿಡಿ, ಅವೆಲ್ಲಾ ಹೇಳುತ್ತಾ ಹೋದರೆ ನಿಮಗೆ ಹೋಟ್ಟೆಕಿಚ್ಚಾಗುತ್ತೆ. ನೀವೂ ನಮ್ಮ ವಯಸ್ಸಿನವರಾಗಿ. ಆಗ ನಾವು ನಮ್ಮ ನಮ್ಮ ವೃತ್ತಿಗಳಿಂದ ರಿಟೈರ್ ಆಗಿರುತ್ತೇವೆ. ನಮ್ಮ ಬಾಲ್ಯದ ದಿನಗಳ ಬಗ್ಗೆ ಪುಸ್ತಕಗಳನ್ನು ಬರೆಯುತ್ತೀವಿ ಅದನ್ನು ಓದಿದಾಗ ನಿಮಗೆಲ್ಲಾ ಅನ್ನಿಸುತ್ತೆ; ನಿಮ್ಮ ಬಾಲ್ಯ ಎಷ್ಟು ಕೃತಕವಾಗಿತ್ತು, ನಿಮ್ಮ ತಂದೆ ತಾಯಿ ನಿಮ್ಮನ್ನು ಎಷ್ಟು 'ವಂಚಿಸಿ'ದ್ದಾರೆಂದು!
ಇಲ್ಲಿ ಕ್ಲಿಕ್ ಮಾಡಿ, ಬಾಲ್ಯದ ರಸಭರಿತ ತುಣುಕ್ಕೊಂದು ಇದೆ.

ಇಂತಿ ನಿಮ್ಮ ಬಗ್ಗೆ ಮರುಕಪಡುವ

'ಪತ್ರ'ಕರ್ತ

Monday, May 22, 2006

ಸಣ್ಣ ಸಣ್ಣ ಸಾಧನೆಗಳ,ಸಂತೋಷಗಳ ಒಟ್ಟು ಮೊತ್ತವೇ ಜೀವನ,ಅಲ್ವಾ?

ಆತ್ಮೀಯ ಹೇಮಾ,
ಮನೆಯಲ್ಲಿ ಇಂಟರ್‍ನೆಟ್ ಸೌಲಭ್ಯದ ಒಂದು ಪ್ರಯೋಜನ ಅಂದರೆ ಯಾವಾಗ ಬೇಕು ಆಗ ಬಳಸಿಕೊಳ್ಳಬಹುದು.ಹೀಗಾಗಿ ನಿನಗೆ ನಾನು ಅಷ್ಟು ಮೇಲ್ ಕಳುಹಿಸಲು ಸಾಧ್ಯವಾಗಿದೆ.ಈ ಹಿಂದೆ ನಾನು ಬಹಳ ಈ-ಮೇಲ್ ಗೆಳೆಯ-ಗೆಳತಿಯರನ್ನು ಕಳೆದು ಕೊಂಡಿದ್ದೇನೆ.ಆಗ ನೆಟ್ ಗಾಗಿ ಹೊರಗಡೆ ಹೋಗ ಬೇಕಾಗಿತ್ತು. ನಿಯಮಿತವಾಗಿ ಸಂಪರ್ಕದಲ್ಲಿರಲು ಸಾಧ್ಯ ಆಗುತ್ತಿರಲಿಲ್ಲ. ಹಾಗಾಗಿ ಆ ಗೆಳೆತನಗಳು ಅಲ್ಲಲ್ಲಿ ಕಳಚಿಕೊಂಡವು.

ನಿನಗೆ ಈ-ಮೇಲ್ ಮಾಡಿ ಬಹಳ ದಿನಗಳಾದವು.ಕಾರಣ ವ್ಯಸ್ತ ದಿನಚರಿ.ನನ್ನ ಒಂದು ಬಲಹೀನತೆ ಎಂದರೆ ಎಲ್ಲವನ್ನು ಗುಡ್ಡೆ ಹಾಕಿಕೊಂಡು ಕೂರುವುದು.ಎಲ್ಲಾವನ್ನು ಮಾಡಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ.ಕೊನೆಗೆ ನೋಡಿದರೆ ಯವುದೂ ಮುಗಿದಿರುವುದಿಲ್ಲ.ಎಲ್ಲಾ 'ತಿರುಪತಿ ಕ್ಷೌರ'! ಉದಾಹರಣೆಗೆ, ಮಿಸಲಾತಿ ವಿವಾದ ಬಗ್ಗೆ ಓದಲು 'ಇಂಡಿಯ ಟುಡೆ' ಮತ್ತು 'ಫ್ರಂಟ್ ಲೈನ್' ತಂದಿಟ್ಟುಕೊಂಡಿದ್ದೇನೆ.ಮೊದಲನೆಯದು ತಂದು ಒಂದು ವಾರದ ಮೇಲಾಯಿತು ಮತ್ತೊಂದನ್ನು ತಂದು ಹದಿನೈದು ದಿನಗಳ ಮೇಲಾಯಿತು. ಎರಡನ್ನೂ ಪೂರ್ತಿ ಓದಿಲ್ಲ! 'ಔಟ್ ಲುಕ್ ಬಿಸಿನೆಸ್' ಎಂಬ ಹೊಸ ನಿಯತಕಲಿಕ ಬಂದಿದೆಯಲ್ಲ ಹೇಗಿದೆ ನೋಡೋಣ ಎಂದು ಒಂದು ಪ್ರತಿ ತಂದ್ದಿಟ್ಟುಕೊಂಡು ಒಂದು ವಾರ ಆಯಿತು, ಅದರ ಓದು ಎರಡು ಮೂರು ಪುಟ್ದ ಆಚೆ ದಾಟಿಲ್ಲ! ಈಗಾಗಲೆ ನಿಯಮಿತವಾಗಿ ತರಿಸುವ ಎರಡು ಪತ್ರಿಕೆಗಳ ಮೂರು ವಾರದ ಸಂಚಿಕೆಗಳು ಹಾಗೆಯೇ ಬಿದ್ದಿವೆ. ಈ ಮಧ್ಯೆ ಕನ್ನಡದಲ್ಲಿ ಇನ್ನೊಂದು ಬ್ಲಾಗ್ ಪ್ರಾರಂಭಿಸಿದ್ದೇನೆ. ಹೆಸರು 'ಓಲೆಗರಿ'. ವಾರಕ್ಕೊಂದು ಪತ್ರ ಬರೆದು ಅಲ್ಲಿ ಪ್ರಕಟಿಸುವ ಉದ್ದೇಶ ಇದೆ. ಸಮಯವನ್ನು ಎಲ್ಲಿಂದ ತರಲಿ(ಕದ್ದಾದರೂ ಸಹ)?

ನನ್ನ ಕನ್ನಡ ಬ್ಲಾಗ್ ಓದಲು ಆಗಲಿಲ್ಲ ಎಂದು ಹೇಳಿದಿಯೆಲ್ಲಾ, ಅದಕ್ಕೆ ಸಂಬಂದಪಟ್ಟ ನಿನಗೆ ಸಹಾಯ ಆಗುವಂತಹ ಲಿಂಕ್ ನೀಡಿದ್ದೇನೆ ಪ್ರಯತ್ನಿಸು.ನಾನು ಕನ್ನಡದಲ್ಲಿ ಬ್ಲಾಗಿಂಗ್ ಮತ್ತು ಈ-ಮೇಲ್ ಮಾಡಲು ಸಾಧ್ಯವಾದದ್ದು 'ಬರಹ' ತಂತ್ರಾಂಶದಿಂದ.
'ಬರಹ' ದ   ಬಗ್ಗೆ ಗೊತ್ತಾ?
ಬ್ಲಾಗ್ ಬಗ್ಗೆ ಗೊತ್ತಿಲ್ಲ ಎಂದು ಹಿಂದೊಮ್ಮೆ ತಿಳಿಸಿದ್ದೆ. ಕೆಲವು ವಾರಗಳ ಹಿಂದೆ 'ಸುಧಾ' ಸಾಪ್ತಾಹಿಕದಲ್ಲಿ ಬ್ಲಾಗ್ ಗಳ ಬಗ್ಗೆ ಮುಖಪುಟ ಲೇಖನ ಪ್ರಕಟವಾಗಿದೆ(೪ ಮೇ,೨೦೦೬). ಹುಡುಕಿ ಓದು.

ಕನ್ನಡದಲ್ಲಿ ಬ್ಲಾಗ್ ಗಳಿರುವುದು ನೋಡಿ ಕನ್ನಡದಲ್ಲಿ ಬ್ಲಾಗ್ ಮಾಡುವ ಆಸೆ ಆಯಿತು,ಅಚ್ಚ ಕನ್ನಡಿಗ ನೋಡು. ಕನ್ನಡವನ್ನು ಇಂಟರ್ ನೆಟ್ ನಲ್ಲಿ ಬಳಸುವ ಬಗ್ಗೆ ಗೊತ್ತಿರಲಿಲ್ಲ.ಅಲ್ಲಿ ಇಲ್ಲಿ ಹುಡುಕಾಡಿ ಕೊನೆಗೂ ಕಲಿತುಬಿಟ್ಟೆ. ಆ ದಿನ ಎಷ್ತು ಖುಶಿ ಆಯಿತು ಗೊತ್ತಾ? ಇಂತಹ ಸಣ್ಣ ಸಣ್ಣ ಸಾಧನೆಗಳ ಒಟ್ಟು ಮೊತ್ತವೇ ಜೀವನ ಅಲ್ವಾ?

ಅಫ್ರಾ ಅಜ್ಜಿ ಮನೆಗೆ ಹೋಗಿದ್ದಾಳೆ.೨೨ ದಿನಗಳಾಯಿತು.ಅವರ ಅಜ್ಜಿಗೆ ಬೇಸಿಗೆ ರಜೆ.ಅದಕ್ಕಾಗಿ ಕರೆದುಕೊಂಡಿದ್ದಾರೆ.ಅವಳಿಲ್ಲದೆ ಇಲ್ಲಿ ಮನೆ ವಾತವರಣ ನೀರಸವಾಗಿದೆ.ಇನ್ನೊದು ವಾರದಲ್ಲಿ ಬರುತ್ತಾಳೆ.ನಾನು ಆಗಾಗ ಎರಡು ದಿನಕ್ಕೊಮ್ಮೆ ಹೋಗಿ ಮಾತಾಡಿಸಿ ಬರುತ್ತೇನೆ.ಅವಳ ಅಮ್ಮನ ತವರು ಮನೆ ಇರುವುದು ಇದೇ ಊರಲ್ಲಿ.ಇನ್ನೊಂದು ಮುಖ್ಯ ವಿಷಯ ಅಂದರೆ ಮದುವೆಗಿಂತ ಮುಂಚೆ ನಾನು ಮತ್ತು ನನ್ನ 'ಹುಡುಗಿ' ಒಂದೇ ಬೀದಿಯಲ್ಲಿ ಇದ್ದವರು!ಮದುವೆ ನಂತರ ಈಗ ಬೇರೆ ಬೇರೆ ಬಡಾವಣೆ.ಹಲೋ! ನೀನೂ ಎಲ್ಲರ ಹಾಗೆ ನಮ್ಮದು ಪ್ರೇಮ ವಿವಾಹ ಅಂದುಕೊಳ್ಳಬೇಡ!ನಮ್ಮದು ಅಪ್ಪಟ ಅರೇಂಜ್ದ್ ಮದುವೆ. ಇನ್ನೊಂದು 'ವಿಚಿತ್ರ'(ಆದರೂ ಸತ್ಯ)ಸಂಗತಿ;ನಾನು ಅವಳನ್ನು ಅದುವರೆಗೂ ನೊಡಿದ್ದು ಒಂದೆರಡು ಬಾರಿ ಅಷ್ಟೆ!ಅದೂ ನಮ್ಮ ಮನೆ ಮುಂದೆ ಹಾದು ಹೊಗುವಾಗ ಒಂದೆರಡು ಕ್ಷಣಗಳಿಗೆ ಮಾತ್ರ!

ಮಾರಾಯಿತಿ!ನಾನು ಬೇರೆಯವರ ದೃಷ್ಟಿಯಲ್ಲಿ 'ಬಹಳ ಒಳ್ಳೆ ಹುಡುಗ'.ಯಾವಾಗ ನೋಡಿದರೂ ಕೈಯಲ್ಲಿ ಪುಸ್ತಕ ಅಥವ ಪತ್ರಿಕೆ ಹಿಡಿದುಕೊಂಡಿರುವವನು!ಮಜಾ ಗೊತ್ತಾ? ಒಮ್ಮೆ ನನ್ನವಳ ಚಿಕ್ಕಮ್ಮನ ಮನೆಯಲ್ಲಿ ಊಟಕ್ಕೆ ಕರೆದಿದ್ದರು.ಅವರ ಮನೆಯಲ್ಲಿ ಪೇಪರ್ ತರಿಸುವುದಿಲ್ಲ.ಅಂದು ನಾನು ಹೋದ ದಿನ ನನಗಾಗಿ ಅಂದಿನ ದಿನಪತ್ರಿಕೆಯೊಂದನ್ನು ತರಿಸಿಟ್ಟಿದ್ದರು. ನನ್ನವಳು ಈ ವಿಷಯ ತಿಳಿಸಿದಾಗ ಮುಜುಗರ ಪಟ್ಟೆ.ಇನ್ನೆಂದೂ ಬೇರೆಯವರ ಮನೆಗೆ ಹೋದಾಗ ಪತ್ರಿಕೆ ಅಥವ ಪುಸ್ತಕ ಮುಟ್ಟಬಾರದು, ನನ್ನದು ಅತಿಯಾಯಿತು ಎಂದು ಶಪಥ ಮಾಡಿಕೊಂಡೆ.ಆದರೆ ಹುಟ್ಟುಗುಣ ಸುಟ್ಟರೂ  ಬಿಡಕಾಗುತ್ತದೆಯೇ?

ನನ್ನ ಪುರಾಣ ಸಾಕು, ನಿನ್ನದೇನು ಹೇಳು?

ಹೇಗಿತ್ತು 'ರೋಮಾಂಚನ'? ಅದೇ ಮಿಸ್ಟರ್ ರೋಮಾಂಚ್ ನನ್ನು ಕಾಲೇಜ್ ಫೆಸ್ಟ್ಗೆ ಆಮಂತ್ರಿಸಿದ್ದೆಯಲ್ಲಾ? ಪಾಪ ಕಣೇ. ಅವನನ್ನು ಬಹಳ ಗೋಳಾಡಿಸ ಬೇಡ. ಆಮೇಲೆ ನಿನ್ನ 'ಚಿಂತೆ'ಯಲ್ಲಿ ಸೊರಗಿ ಬಿಟ್ಟಾನು. ಈ ಕಪಿ ಚೇಷ್ಟೆ ಎಲ್ಲಾ ಬಿಟ್ಟು ಓದಿನ ಕಡೆ, ಭವಿಷ್ಯದ ಕಡೆ ಗಮನ ಕೊಡು ಮರೀ.

ಛೇ,ಮರೆತೇ ಬಿಟ್ಟೆ. Congratulations ಕಣೇ.ನೀನು distinctionನಲ್ಲಿ ಪಾಸ್ ಆಗಿದಕ್ಕೆ! ಅದ್ಯಾವಾಗ ಓದಿದೆ? ಯಾವಾಗ್ ನೋಡಿದರೂ 'ಸಂಸ್ಕಾರ' ಓದಿದೆ, ಇಡೀ ದಿನ ನಿದ್ದೆ ಮಾಡಿ ಕಳೆದೆ ಎಂದೆಲ್ಲಾ ಹೇಳುತ್ತಿದ್ದೇ? ಒಳ್ಳೆಯದಾಗಲಿ.

ನಿನ್ನ ಕಾಲೇಜು ಇನ್ನೂ shift ಆಗಿಲ್ಲವಾ? ನಿಮ್ಮ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ಈ-ಮೆಲ್ ಮಾಡು.

ಇಂತಿ ನಿನ್ನ
ಈ-ಗೆಳೆಯ(e-friend)